ಮಿಥಿಲೆಯ ಮಾವಿನ ಮರ – ಕವನ ಸಂಕಲನ

195.00

ನೆಲ್ಲುಕುಂಟೆ ವೆಂಕಟೇಶ್ ಅವರ ಈ ಸಂಕಲನ ಬಿಡಿಕವನಗಳಂತೆ ಕಂಡರೂ ಇಡೀ ಸಂಕಲನವೇ ಒಂದು ಕವನವೇನೋ ಎಂಬ ಭಾವನೆ ಓದುವವರಲ್ಲಿ ಮೂಡುತ್ತದೆ. ಒಟ್ಟಂದದಲ್ಲಿ ಮೂಡುವ ‘ಭಾವಸ್ಥಿತಿ’ ಓದುಗರಾದ ನಮ್ಮನ್ನು ಆವರಿಸುತ್ತದೆ. ಈ ಸನ್ನಿವೇಶದಲ್ಲಿ ‘ನಾವು ಯಾರು?’ ಎಂಬ ಪ್ರಶ್ನೆ ಹುಟ್ಟಲೇ ಬೇಕು. ಇಲ್ಲಿನ ಒಂದು ಕವಿತೆಯು ಬಹಳ ಕಟುವಾಗಿ ಟೀಕಿಸುವ ‘ನಡು ವಾರ್ಗಿಕ’ರಾಗಿ (ಮಿಡ್ಲ್ ಕ್ಲಾಸ್) ನಮ್ಮನ್ನು ನಾವೇ ನೋಡಿಕೊಳ್ಳದೆ, ಕವಿತೆಗಳನ್ನು ಓದುತ್ತಿರುವ ವಿದ್ಯಾವಂತರಾದ ನಮಗೆ ವಿಧಿಯಿಲ್ಲ. ಆಗ ಹುಟ್ಟುವುದು, ಸುಡುವಂತಹ ‘ಅಪರಾಧ ಪ್ರಜ್ಞೆ’. ಒಂದು ಕಾಲದಲ್ಲಿ ಸಿದ್ದಲಿಂಗಯ್ಯ, ದೇವನೂರ ಮಹಾದೇವರ ಬರವಣಿಗೆಯು ಈ ರೀತಿಯ ‘ನಾಚಿಕೆ’ ಹುಟ್ಟಿಸುವ ಪ್ರಯತ್ನ ಮಾಡಿದವು. ಆದರೆ ಮನುಷ್ಯರ ‘ವರ್ಗ ಸ್ವಭಾವ’ದಲ್ಲಿ ಬದಲಾವಣೆ ತರುವುದು ಸುಲಭವಲ್ಲ. ಕಾನೂನು ತಂದಷ್ಟು ಬದಲಾವಣೆಯನ್ನು ‘ಹೃದಯ ಸಾಕ್ಷಿ’(?) ತರುವುದಿಲ್ಲ. ಈ ಮಾತಿಗೆ ಸಾಕ್ಷಿಯೆನ್ನುವಂತೆ ಇಲ್ಲಿನ ಕವಿತೆಗಳ ಹತಾಶೆ ಇದೆ. ‘ಅಲ್ಲೇ ಕುಂತವ್ರೆ, ಅವರು ಅಲ್ಲೇ ಕುಂತವ್ರೆ’ ಎನ್ನುವುದೇ ಕಟುಸತ್ಯ.

  • ಎಚ್. ಎಸ್. ರಾಘವೇಂದ್ರ ರಾವ್

ಇಲ್ಲಿನ ಕವನಗಳಲ್ಲಿ ಹೃದಯಯವಂತಿಕೆ ಮತ್ತು ಕನಸುಣಿ ವ್ಯಕ್ತಿತ್ವದ ಅಂತರಾಳದ ಮೊರೆತವಿದೆ. ನಾಡಿನಲ್ಲಿ ವಿಕರಾಳವಾಗಿ ಮೈದೋರಿರುವ ಕೇಡಿಗೆ ತಳಮಳಿಸುವ ತಲ್ಲಣಗಳ ಅಭಿವ್ಯಕ್ತಿಯಿದು. ನೆಲ್ಲುಕುಂಟೆ, ನಮ್ಮ ಕಾಲದ ಗಾಢ ವಿಷಾದದ ಕವಿ. ಒಳಿತನ್ನು‌ ಆರ್ತವಾಗಿ ಆವಾಹಿಸುವ ಕೆಲವು ಕವನಗಳು, ಟಾಗೂರರ ಗೀತಾಂಜಲಿಯ ರಚನೆಗಳನ್ನು ನೆನಪಿಸುತ್ತವೆ. ಇಲ್ಲಿನ ಪುರಾಣ ರೂಪಕಗಳು ನವೀನವಾಗಿವೆ. ಆದರೆ ಮುಂಗಾರು ಮಳೆಯಂತೆ ಸುರಿವ ರೂಪಕಗಳನ್ನು ಹಿಡಿದು ಭೇದಿಸಿ ಕವಿತೆಯ ದನಿಯನ್ನು ತುಡುಕುವುದೇ ಸವಾಲು. ಒಂದೇ ರೂಪಕ ಪ್ರತಿಮೆಯಾಗಿ ಇಡೀ ಕವಿತೆಯನ್ನು ಆವರಿಸಿಕೊಳ್ಳುವ ರಚನೆಗಳು ಇಲ್ಲಿ ಕಡಿಮೆ. ಬಹಳಷ್ಟು ಕಡೆ ರೂಪಕಗಳ ಸರಮಾಲೆಯೇ ಕವಿತೆಯಾಗಿದೆ. ಕವಿಗಿರುವ ರೂಪಕಗಳ ಬಗೆಗಿನ ಸಹಜ ಸೆಳೆತವೊ, ಲೋಕದ ಬಾಳಿನಲ್ಲಿರುವ ಉರಿವ ದಿಟವನ್ನು ನೇರ ಹೇಳಲಾಗದ ಅಸಹಾಯಕತೆಯೊ ಎಂಬಂತೆ ಇಲ್ಲಿನ ಗೂಢ ಶೈಲಿಯಿದೆ.

  • ರಹಮತ್ ತರೀಕೆರೆ

Description

ಮಿಥಿಲೆಯ ಮಾವಿನ ಮರ – ಕವನ ಸಂಕಲನ

ಗತದೆದುರು ವರ್ತಮಾನ, ವರ್ತಮಾನದೆದುರು ಗತಗಳನ್ನು ಎದುರಾಬದುರಾಗಿಟ್ಟು ರೂಪಕಗಳ ದಾಳ ಉರುಳಿಸುತ್ತಾ ಪ್ರಶ್ನೆಗಳ ಚದುರಂಗದ ಮೇಲೆ ಕಾವ್ಯ ಕಟ್ಟುತ್ತಿರುವ ಕವಿ ನೀವು. ಕನ್ನಡ ಕಾವ್ಯಕ್ಕೆ ಇನ್ನೂ ಜೀವವಿದೆ ಎಂಬುದರ ಸಾಕ್ಷಿ ಇಲ್ಲಿನ ಕವನಗಳು.

ಬಿ. ಎಲ್. ರಾಜು

ನೆಲ್ಲುಕುಂಟೆ ವೆಂಕಟೇಶ್ ಕಾವ್ಯದಲ್ಲಿ, ಬಿಡದೆ ಬೆನ್ನಟ್ಟಿ ಬರುವ ಕಡಲ ತೆರೆಗಳಂತಹ ರೂಪಕಗಳು, ಪ್ರತಿಮೆಗಳು, ಕವಿಯ ಕಾಲಘಟ್ಟದ ತಳಮಳವನ್ನು ಲಯಗಾರಿಕೆಯ ಸಮೇತ ನಮಗೆ ತಲುಪಿಸುತ್ತವೆ. ವೆಂಕಟೇಶ್ ಹೊರತರುತ್ತಿರುವ ಮೊದಲ ಕೃತಿ ಇದು. ಪತ್ರಿಕೆಗಳಲ್ಲಿ ಬರೆದ ಬರವಣಿಗೆಗಳ ಲೆಕ್ಕದಲ್ಲಿ ಹೇಳಬೇಕೆಂದರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪುಸ್ತಕ ಪ್ರಕಟಣೆಗೂ ಮೊದಲೇ ಬಹಳ ಭರವಸೆ ಮೂಡಿಸಿರುವ ಕವಿ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಂಡ ಪ್ರತಿ ಕವನವನ್ನೂ ಓದಿ ಮೆಚ್ಚಿಕೊಂಡ ಕಾವ್ಯದ ಗಂಭೀರ ಓದುಗರು ಆಗಿಂದಾಗಲೇ ವ್ಯಕ್ತಪಡಿಸಿರುವ ಮೆಚ್ಚುಗೆ ವೆಂಕಟೇಶ್ ಅವರ ಗಾಢಾಭಿವ್ಯಕ್ತಿಗೊಂದು ಮಾನಪತ್ರ.
ಬಂಜಗೆರೆ ಜಯಪ್ರಕಾಶ

Reviews

There are no reviews yet.

Be the first to review “ಮಿಥಿಲೆಯ ಮಾವಿನ ಮರ – ಕವನ ಸಂಕಲನ”

Your email address will not be published. Required fields are marked *